ತುಪ್ಪದ ಹುಡುಗಿ ಎಂದೇ ಖ್ಯಾತರಾಗಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಕ್ರಿಕೆಟ್ ಅಂಗಣಕ್ಕೆ ಅಡಿಯಿರಿಸಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿಯಾಗಿರುವಾಗಲೇ ಕ್ರಿಕೆಟ್ ಬಗೆಗೂ ಆಸಕ್ತಿ ತಳೆದಿರುವ ರಾಗಿಣಿ ಇದೀಗ ಪ್ರತಿಷ್ಠಿತ ಕೆಪಿಎಲ್ ಲೀಗ್ನಲ್ಲಿ ಸ್ಪರ್ಧಿಸಲಿರುವ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರೀಗ ಬಳ್ಳಾರಿ ಟಸ್ಕರ್ಸ್ ಮೂಲಕ ಗ್ರಾಮೀಣ ಭಾಗಗಳ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ದೊಡ್ಡ ಕನಸಿಟ್ಟುಕೊಂಡು ಕೆಪಿಎಲ್ ಪಂದ್ಯಾಟಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಈ ಪ್ರತಿಷ್ಠಿತ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆಪಿಎಲ್ ಟೂರ್ನಿ ದಿನಾಂಕ ಪ್ರಕಟಿಸಲಾಗಿದೆ. ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ ಹಲವು ವಿಶೇಷತೆಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ೮ ತಂಡಗಳ ಫ್ರಾಂಚೇಸಿ ಮಾಲೀಕರು ಕೂಡ ಕೆಪಿಎಲ್ ಟೂರ್ನಿಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಟಗಾರರ ಹರಾಜಿಗೆ ಮಾಲೀಕರು ಕೂಡ ಸಜ್ಜಾಗಿದ್ದಾರೆ. ನಾಲ್ಕನೇ ಆವೃತ್ತಿ ಕೆಪಿಎಲ್ ಟೂರ್ನಿ ಮೈಸೂರಿನಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಸೆಪ್ಟೆಂಬರ್ ೧೬ ರಿಂದ ೨೨ ರ ವರೆಗಿನ ಪಂದ್ಯಗಳು ಸಾಂಸ್ಕೃತಿಕ ನಗರಿಯಲ್ಲೇ ನಡೆಯಲಿದೆ. ಬಳಿಕ ಸೆಪ್ಟೆಂಬರ್ ೨೪ ರಿಂದ ಅಕ್ಟೋಬರ್ ೧ರ ವರೆಗಿನ ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ಹುಬ್ಬಳ್ಳಿ ಆತಿಥ್ಯ ವಹಿಸಲಿದೆ. ರಾಗಿಣಿ ದ್ವಿವೇದಿ ಈ ಇಡೀ ರೋಚಕ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿ ಮಿಂಚಲಿದ್ದಾರೆ.
ಅಂದಹಾಗೆ ಬಳ್ಳಾರಿಯ ಅರವಿಂದ್ ರೆಡ್ಡಿಯವರ ಸಹಭಾಗಿತ್ವದಲ್ಲಿ ರಾಗಿಣಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದಾರೆ. ತಮ್ಮ ತಂಡವನ್ನು ಗೆಡಲುವಿಗೆ ಸಜ್ಜುಗೊಳಿಸಲು ಭರ್ಜರಿಯಾದ ತಯಾರಿಯನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ. ರಾಜ್ಯದ ಸಮರ್ಥ ತರಬೇತುದಾರರು ಹಾಗೂ ಮೆಂಟರ್ಸ್ಗಳ ಮೂಲಕ ಬಳ್ಳಾರಿ ಟಸ್ಕರ್ಸ್ ತಂಡವನ್ನು ತಯಾರು ಮಾಡಿದ್ದಾರೆ.
‘ಈ ರಾಜ್ಯ ನನಗೆ ಎಲ್ಲವನ್ನೂ ಕೊಟ್ಟಿದೆ. ಇಲ್ಲಿನ ಜನರ ಪ್ರೀತಿಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಲ್ಲಿಗಾಗಿ ನಾನೇನಾದರೂ ಮಾಡಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ನನ್ನ ಫ್ಯಾನ್ಸ್ ಅಸೋಸಿಯೇಷನ್ ಮೂಲಕ ಒಂದಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ರೀಡಾ ಕ್ಷೇತ್ರದಲ್ಲಿಯೂ ಕರ್ನಾಟಕದ ಪ್ರತಿಭಾವಂತರನ್ನು ಮುಖ್ಯಭೂಮಿಕೆಗೆ ತರಬೇಕೆಂಬ ಉದ್ದೇಶ ಇಟ್ಟುಕೊಂಡು ಬಳ್ಳಾರಿ ಟಸ್ಕರ್ಸ್ ತಂಡದ ಭಾಗವಾಗಿದ್ದೇನೆ ಅಂತ ರಾಗಿಣಿ ದ್ವಿವೇದಿಯೇ ವಿವರಣೆ ನೀಡುತ್ತಾರೆ.
ಇದೀಗ ರಾಗಿಣಿ ಮುಂದಾಳತ್ವದಲ್ಲಿ ಸಂಪೂರ್ಣವಾಗಿ ತಯಾರಾಗಿರುವ ಬಳ್ಳಾರಿ ಟಸ್ಕರ್ಸ್ ತಂಡದ ಟೈಟಲ್ ಸ್ಪಾನ್ಸರ್ ಮಾಡಿರುವುದು ಶೈಲೇಂದ್ರಕುಮಾರ್ ಫೌಂಡೇಷನ್. ಇದರ ಸ್ಥಾಪಕರಾದ ಡಾ.ಶೈಲೇಂದ್ರ ಕುಮಾರ್ ರಾಜ್ಯದ ಪ್ರಸಿದ್ಧ ನ್ಯೂರೋ ಸರ್ಜನ್. ಇವರು ಈ ಫೌಂಡೇಷನ್ ಮೂಲಕ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರ, ಉದ್ಯೋಗ ಮೇಳಗಳನ್ನು ನಡೆಸುತ್ತಾ ಗ್ರಾಮೀಣರ ಆರೋಗ್ಯ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರೇ ಬಳ್ಳಾರಿ ಟಸ್ಕರ್ಸ್ ಜೊತೆಗಿರೋದರಿಂದ ಈ ಮೂಲಕ ಗ್ರಾಮೀಣ ಭಾಗದಲ್ಲಿರುವ ಇತರೇ ಕ್ರೀಡಾ ಪಟುಗಳಿಗೂ ವೇದಿಕೆ ಕಲ್ಪಿಸಿಕೊಡುವ ಕನಸೂ ರಾಗಿಣಿಯವರಿಗಿದೆಯಂತೆ.
ಸದ್ಯ ಕೆಪಿಎಲ್ ಟೂರ್ನಿಯತ್ತ ಗಮನ ನೆಟ್ಟಿರುವ ರಾಗಿಣಿ ತಮ್ಮ ಬಳ್ಳಾರಿ ಟಸ್ಕರ್ಸ್ ತಂಡವನ್ನು ಸಮರ್ಥವಾಗಿ ಸೆಣೆಸುವಂತೆ ಸಜ್ಜುಗೊಳಿಸಿದ್ದಾರೆ. ಈ ತಂಡದಲ್ಲಿ ಅಮಿತ್ ವರ್ಮಾ, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ಅಖಿಲ್ ಸೇರತಿದಂತೆ ಸಮರ್ಥ ಆಟಗಾರರಿದ್ದಾರೆ. ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವಾಗಲೇ ಕ್ರೀಡಾ ಪ್ರೇಮದಿಂದ ಆ ವಲಯಕ್ಕೆ ಅಡಿಯಿರಿಸಿರುವ ರಾಗಿಣಿಗೆ ಒಳಿತಾಗಲಿ ಅಂತ ಹಾರೈಸೋಣ...